ಮಹಾರಾಷ್ಟ್ರದ ಅಮರಾವತಿ ಅಂದ್ರೆ ಅದೊಂದು ಎಜುಕೇಶನ್ ಹಬ್. ಆದ್ರೆ ಇಂತಾ ಕಡೆ ಈಗ ಅಕ್ಷರಶಃ ಎದೆ ನಡುಗೋವಂತಾ ಕೃತ್ಯವೊಂದು ಬಯಲಾಗಿದೆ. ಓದೋಕೆ ಅಂತ ಬರೋ ಮುಗ್ಧ ಹೆಣ್ಣುಮಕ್ಕಳನ್ನೇ ಟಾರ್ಗೆಟ್ ಮಾಡಿ, ಅವರ ಜೀವನದ ಜೊತೆ ಆಟವಾಡ್ತಿದ್ದ ಒಂದು ಕಾಮುಕ ಗ್ಯಾಂಗ್ನ ಪೊಲೀಸರು ಈಗ ಹೆಡೆಮುರಿ ಕಟ್ಟಿದ್ದಾರೆ. ಈ ಪ್ರಕರಣದ ತೀವ್ರತೆ ಎಷ್ಟಿದೆ ಎಂದರೆ, ಮಹಾರಾಷ್ಟ್ರ ಸರ್ಕಾರ ತನಿಖೆಗಾಗಿ ಬರೋಬ್ಬರಿ 47 ಸದಸ್ಯರ ವಿಶೇಷ ತನಿಖಾ ತಂಡವನ್ನು (SIT) ರಚಿಸಿದೆ.
ಈ ಇಡೀ ಕೃತ್ಯದ ಮಾಸ್ಟರ್ ಮೈಂಡ್ 19 ವರ್ಷದ ಅಯಾನ್ ಅಹ್ಮದ್ ತನ್ವೀರ್. ಈತ ತನ್ನ ಗ್ಯಾಂಗ್ ಜೊತೆ ಸೇರಿ ನಗರದ ಪ್ರಸಿದ್ಧ ಕೋಚಿಂಗ್ ಸೆಂಟರ್ಗಳಾದ 'ಫ್ಯೂಚರ್ ಹಂಟ್' ಮತ್ತು 'ಆಕಾಶ್' ಇನ್ಸ್ಟಿಟ್ಯೂಟ್ಗೆ ಬರುವ ವಿದ್ಯಾರ್ಥಿನಿಯರನ್ನೇ ಟಾರ್ಗೆಟ್ ಮಾಡುತ್ತಿದ್ದ. ಅಷ್ಟೇ ಅಲ್ಲ, ಈತನಿಗೆ 'ಬಾರೂದ್ ಗ್ಯಾಂಗ್' ಎಂಬ ಕ್ರಿಮಿನಲ್ ಗುಂಪು ಹಣಕಾಸಿನ ಸಹಾಯ ಮಾಡುತ್ತಿತ್ತು ಎಂಬ ಕರಾಳ ಸತ್ಯ ಹೊರಬಂದಿದೆ.
ಈ ಕಾ*ಮುಕ ಜಾಲದ ಕೆಲಸದ ರೀತಿ ಭಯಾನಕವಾಗಿತ್ತು. ಈ ಕಿರಾತಕರ ಕೆಲಸದ ರೀತಿ ನಿಜಕ್ಕೂ ಭಯಾನಕವಾಗಿತ್ತು. ಮೊದಲು ಕ್ಲಾಸ್ಗಳಲ್ಲಿ ಹುಡುಗಿಯರ ಜೊತೆ ತುಂಬಾ ಆತ್ಮೀಯವಾಗಿ ಸ್ನೇಹ ಬೆಳೆಸುತ್ತಿದ್ದರು. ಆಮೇಲೆ ಅದೇ ನಂಬಿಕೆಯಲ್ಲಿ ಅವರನ್ನ ಕೆಫೆ ಅಥವಾ ಹೋಟೆಲ್ ರೂಮ್ಗಳಿಗೆ ಕರೆದೊಯ್ಯುತ್ತಿದ್ದರು. ಅಲ್ಲಿ ಆ ಯುವತಿಯರಿಗೆ ಗೊತ್ತೇ ಆಗದ ಹಾಗೆ ಅವರ ಖಾಸಗಿ ಕ್ಷಣಗಳನ್ನ ವಿಡಿಯೋ ಮಾಡಿಕೊಳ್ಳುತ್ತಿದ್ದರು. ಆಮೇಲೆ ಶುರುವಾಗುತ್ತಿತ್ತು ನೋಡಿ ಅಸಲಿ ಆಟ! ಆ ವಿಡಿಯೋಗಳನ್ನ ಇಟ್ಟುಕೊಂಡು ಹೆದರಿಸೋದು, ಹಣಕ್ಕಾಗಿ ಪೀಡಿಸೋದು ಮತ್ತು ಪದೇ ಪದೇ ಅವರ ಮೇಲೆ ದೌರ್ಜನ್ಯ ಮಾಡೋದೇ ಇವರ ಕೆಲಸವಾಗಿತ್ತು.
ವರದಿಗಳ ಪ್ರಕಾರ, ಈ ಗ್ಯಾಂಗ್ ಕೈಯಲ್ಲಿ ಬರೋಬ್ಬರಿ 300ಕ್ಕೂ ಹೆಚ್ಚು ಹುಡುಗಿಯರು ಸಿಲುಕಿ ನಲುಗಿ ಹೋಗಿದ್ದಾರೆ. ಪೊಲೀಸರು ಈ ಅಯಾನ್ ಎಂಬವನಿಂದ ಸುಮಾರು 180ಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗಳನ್ನ ವಶಪಡಿಸಿಕೊಂಡಿದ್ದಾರೆ ಅಂದ್ರೆ ನೀವು ನಂಬಲೇಬೇಕು!
ಅಸಲಿಗೆ ಈ ಭೀಕರ ದಂಧೆ ಹೊರಗಡೆ ಬಂದಿದ್ದೇ ಒಂದು ಆಕಸ್ಮಿಕ. ಈ ಅಯಾನ್ ಅಹ್ಮದ್ ಮತ್ತು ಅವನ ಜೊತೆಗಿದ್ದ ಉಜೇರ್ ಖಾನ್ ನಡುವೆ ಯಾವುದೋ ವಿಷಯಕ್ಕೆ ಕಿರಿಕಿರಿ ಶುರುವಾಗಿತ್ತು. ಈ ಹಗೆತನದಿಂದಾಗಿ ಅವರ ಹತ್ತಿರವಿದ್ದ ವಿಡಿಯೋಗಳನ್ನ ಆನ್ಲೈನ್ನಲ್ಲಿ ಲೀಕ್ ಮಾಡಿಕೊಂಡರು. ಇದು ಪೊಲೀಸರ ಗಮನಕ್ಕೆ ಬಂದ ತಕ್ಷಣ ಅಲರ್ಟ್ ಆಗಿ ಅಯಾನ್ ಮತ್ತು ಅವನ ಇಡೀ ಗ್ಯಾಂಗ್ ಅನ್ನು ಅರೆಸ್ಟ್ ಮಾಡಿ ಜೈಲಿಗಟ್ಟಿದ್ದಾರೆ. ಅಷ್ಟೇ ಅಲ್ಲ, ಅಯಾನ್ಗೆ ಸೇರಿದ ಮನೆಯ ಅಕ್ರಮ ಭಾಗಗಳನ್ನ ಬುಲ್ಡೋಜರ್ ಮೂಲಕ ಪುಡಿಪುಡಿ ಮಾಡಲಾಗಿದೆ.
ಹೆಣ್ಣುಮಕ್ಕಳೇ ಮತ್ತು ಪೋಷಕರೇ, ಈ ಕಡೆ ಸ್ವಲ್ಪ ಗಮನ ಕೊಡಿ:
ಕಾಲೇಜು ಅಥವಾ ಕೋಚಿಂಗ್ ಕ್ಲಾಸ್ನಲ್ಲಿ ಯಾರೋ ಹೊಸಬ್ರು ಪರಿಚಯ ಆದ್ರು ಅಂತ ಅವರನ್ನ ಫುಲ್ ನಂಬೋಕೆ ಹೋಗ್ಬೇಡಿ. ಅವರು ಎಂತವ್ರು, ಅವರ ಹಿನ್ನೆಲೆ ಏನು ಅಂತ ಕರೆಕ್ಟಾಗಿ ಗೊತ್ತಿಲ್ಲದೆ ಸುಮ್ಸುಮ್ನೆ ಹೊರಗಡೆ ಸುತ್ತಾಡೋದು, ಹೋಟೆಲ್ ಅಥವಾ ಕೆಫೆಗಳಿಗೆ ಹೋಗೋ ಸಾಹಸ ಮಾತ್ರ ಮಾಡಲೇಬೇಡಿ. ಒಂದು ವೇಳೆ ಅನಿವಾರ್ಯವಾಗಿ ಹೋಗ್ಲೇಬೇಕಾದ್ರೂ ಸರಿ, ಅಲ್ಲಿ ಎಲ್ಲಾದ್ರೂ ಗುಪ್ತ ಕ್ಯಾಮೆರಾಗಳು ಇವೆಯಾ ಅಂತ ಒಂದಕ್ಕೆರಡು ಸಾರಿ ನೀಟಾಗಿ ಚೆಕ್ ಮಾಡಿಕೊಳ್ಳೋದು ಮರಿಬೇಡಿ. ಹುಷಾರಾಗಿರೋದು ಯಾವತ್ತಿದ್ರೂ ಒಳ್ಳೇದು.
ಯಾರಾದರೂ ನಿಮ್ಮ ಫೋಟೋ ಅಥವಾ ವಿಡಿಯೋ ಇಟ್ಟುಕೊಂಡು ಹೆದರಿಸುತ್ತಿದ್ದರೆ ಅಥವಾ ಬ್ಲ್ಯಾಕ್ಮೇಲ್ ಮಾಡುತ್ತಿದ್ದರೆ, ದಯವಿಟ್ಟು ಭಯಪಟ್ಟು ಮೌನವಾಗಿ ಕೂರಬೇಡಿ. ನೀವು ಸುಮ್ಮನಾದಷ್ಟು ಅವರು ನಿಮ್ಮನ್ನ ಮತ್ತಷ್ಟು ಕಾಡುತ್ತಾರೆ. ತಕ್ಷಣ ನಿಮ್ಮ ಪೋಷಕರಿಗೆ ಅಥವಾ ಪೊಲೀಸರಿಗೆ (ಹೆಲ್ಪ್ಲೈನ್ 112 ಅಥವಾ 1091) ಧೈರ್ಯವಾಗಿ ವಿಷಯ ತಿಳಿಸಿ. ನಿಮ್ಮ ಮೌನವೇ ಅವರಿಗೆ ದೊಡ್ಡ ಬಂಡವಾಳ ಅನ್ನೋದನ್ನ ಮರೆಯಬೇಡಿ.
ಪೋಷಕರಿಗೂ ಒಂದು ಮಾತು: ನಿಮ್ಮ ಮಕ್ಕಳು ಕ್ಲಾಸ್ ಮುಗಿಸಿ ಬಂದ ಮೇಲೆ ಅವರ ಮುಖ ಹೇಗಿದೆ, ಅವರ ನಡವಳಿಕೆಯಲ್ಲಿ ಏನಾದರೂ ಬದಲಾವಣೆ ಆಗಿದೆಯೇ ಅಂತ ಗಮನಿಸಿ. ಅವರ ಹತ್ತಿರ ಅಪ್ಪ-ಅಮ್ಮನಿಗಿಂತ ಹೆಚ್ಚಾಗಿ ಒಬ್ಬ ಒಳ್ಳೆ ಗೆಳೆಯನಂತೆ ಮಾತನಾಡಿ, ಅವರಿಗೆ ಏನೇ ಕಷ್ಟ ಬಂದರೂ ನಾವು ಜೊತೆಗಿದ್ದೇವೆ ಅನ್ನೋ ಧೈರ್ಯ ತುಂಬಿ. ಬರೀ ಪಾಠ ಹೇಳಿಕೊಟ್ಟರೆ ಸಾಲದು, ಮಕ್ಕಳ ಸುರಕ್ಷತೆಗೂ ಸಂಸ್ಥೆಗಳು ಆದ್ಯತೆ ನೀಡಬೇಕು.
ಅಮರಾವತಿಯಲ್ಲಿ ನಡೆದ ಈ ಘಟನೆ ನಮಗೆಲ್ಲ ಒಂದು ದೊಡ್ಡ ಎಚ್ಚರಿಕೆ ಗಂಟೆ. ಇಂತಹ ಕ್ರಿಮಿನಲ್ಗಳಿಗೆ ಸಮಾಜದಲ್ಲಿ ಕಠಿಣ ಶಿಕ್ಷೆ ಆಗಲೇಬೇಕು. ಎಲ್ಲರೂ ಜಾಗರೂಕರಾಗಿರೋಣ.