Mar 1, 2026 Languages : ಕನ್ನಡ | English

ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಬಲಿಯಾದ ಪುಟಾಣಿ ಅನನ್ಯಾ - ಕಿತ್ತುಹೋದ ಬಸ್ ಶೀಟ್, ಚಕ್ರದ ಅಡಿಗೆ ಬಿದ್ದು ಮಗು ಸಾವು!!

ಅಲಿಗಢದಲ್ಲಿ ನಡೆದ ಈ ಘಟನೆ ಅತ್ಯಂತ ಹೃದಯವಿದ್ರದಕ ಮತ್ತು ಆಘಾತಕಾರಿ. ಎಂಟು ವರ್ಷದ ಪುಟಾಣಿ ಅನನ್ಯಾ ಸಾವು ಕೇವಲ ಒಂದು ಅಪಘಾತವಲ್ಲ, ಅದು ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಸಂದ ಬಲಿಯಾಗಿದೆ. 

ತೂತು ಬಿದ್ದ ಬಸ್‌ನಲ್ಲಿ ಮಕ್ಕಳ ಪಯಣ
ತೂತು ಬಿದ್ದ ಬಸ್‌ನಲ್ಲಿ ಮಕ್ಕಳ ಪಯಣ

ಉತ್ತರ ಪ್ರದೇಶದ ಅಲಿಗಢದಲ್ಲಿ ಮನುಷ್ಯಕುಲವೇ ತಲೆತಗ್ಗಿಸುವಂತಹ ಘಟನೆಯೊಂದು ನಡೆದಿದೆ. ಎಂಟು ವರ್ಷದ ಬಾಲಕಿ ಅನನ್ಯಾ, ತಾನು ಪ್ರತಿದಿನ ಶಾಲೆಗೆ ಹೋಗುತ್ತಿದ್ದ ಬಸ್‌ನಲ್ಲೇ ಪ್ರಾಣ ಕಳೆದುಕೊಂಡಿದ್ದಾಳೆ. ಇದು ಕೇವಲ ಒಂದು ಆಕಸ್ಮಿಕ ಸಾವಲ್ಲ, ಬದಲಿಗೆ ಶಾಲಾ ಆಡಳಿತ ಮಂಡಳಿ ಮತ್ತು ಸಾರಿಗೆ ವ್ಯವಸ್ಥೆಯ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ.

ಘಟನೆಯ ಭೀಕರತೆ

ಅನನ್ಯಾ ತನ್ನ ಶಾಲಾ ಬಸ್‌ನ ಸೀಟಿನಲ್ಲಿ ಕುಳಿತಿದ್ದಾಗ, ಹಳೆಯದಾಗಿದ್ದ ಬಸ್‌ನ ನೆಲದ ಭಾಗ (Floor) ಇದ್ದಕ್ಕಿದ್ದಂತೆ ಕುಸಿದಿದೆ. ಮಗು ಕುಳಿತಿದ್ದ ಜಾಗದಲ್ಲೇ ನೆಲದ ಕಬ್ಬಿಣದ ಶೀಟ್ ಕಿತ್ತುಹೋಗಿದ್ದರಿಂದ, ಅನನ್ಯಾ ಬಸ್ ಚಲಿಸುತ್ತಿರುವಾಗಲೇ ಕೆಳಕ್ಕೆ ಬಿದ್ದಿದ್ದಾಳೆ. ದುರದೃಷ್ಟವಶಾತ್, ಅದೇ ಬಸ್‌ನ ಚಕ್ರಗಳು ಮಗುವಿನ ಮೇಲೆ ಹರಿದು, ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ಸಾವಿನ ಬಲೆಂತಿದ್ದ ಬಸ್

ದುರಂತ ನಡೆದ ನಂತರ ಆ ಬಸ್‌ನ ಸ್ಥಿತಿಯನ್ನು ನೋಡಿದರೆ ಎಂತಹವರಿಗಾದರೂ ಮೈ ಜುಂ ಎನ್ನುತ್ತದೆ.

  • ಬಸ್‌ನ ಸೀಟುಗಳು ಹರಿದು ಹೋಗಿದ್ದವು.
  • ನೆಲದ ಹಲವು ಭಾಗಗಳಲ್ಲಿ ಕಬ್ಬಿಣದ ಶೀಟ್ ಕಿತ್ತುಹೋಗಿ ತೂತುಗಳಾಗಿದ್ದವು.
  • ಅದು ಮಕ್ಕಳನ್ನು ಕರೆದೊಯ್ಯುವ ವಾಹನದಂತೆ ಇರಲಿಲ್ಲ, ಬದಲಿಗೆ "ಚಲಿಸುವ ಸಾವಿನ ಬಲೆ"ಯಂತೆ ಕಾಣುತ್ತಿತ್ತು.

ಇಂತಹ ಕಂಡೀಷನ್ ಇಲ್ಲದ ವಾಹನಕ್ಕೆ ಫಿಟ್ನೆಸ್ ಸರ್ಟಿಫಿಕೇಟ್ ಸಿಕ್ಕಿದ್ದು ಹೇಗೆ? ಸಾರಿಗೆ ಇಲಾಖೆಯ ಅಧಿಕಾರಿಗಳು ಮತ್ತು ಶಾಲಾ ಆಡಳಿತ ಮಂಡಳಿ ಇಷ್ಟು ದಿನ ಈ ಬಸ್ಸನ್ನು ರಸ್ತೆಗೆ ಇಳಿಸಲು ಹೇಗೆ ಅನುಮತಿ ನೀಡಿದರು ಎಂಬುದು ಈಗ ದೊಡ್ಡ ಪ್ರಶ್ನೆಯಾಗಿದೆ.

ಸಾರ್ವಜನಿಕರ ಆಕ್ರೋಶ

ಪ್ರತಿ ಬಾರಿ ಇಂತಹ ಘಟನೆ ನಡೆದಾಗಲೂ ತನಿಖೆಯ ಭರವಸೆ ನೀಡುವ ವ್ಯವಸ್ಥೆ, ನಂತರ ಮೌನಕ್ಕೆ ಶರಣಾಗುತ್ತದೆ. ಪೋಷಕರು ತಮ್ಮ ಮಕ್ಕಳನ್ನು ಸುರಕ್ಷಿತವಾಗಿ ಶಾಲೆಗೆ ತಲುಪುತ್ತಾರೆ ಎಂಬ ನಂಬಿಕೆಯಿಂದ ಕಳುಹಿಸುತ್ತಾರೆ. ಆದರೆ ಆಡಳಿತ ಮಂಡಳಿಯ ಹಣದ ದಾಹಕ್ಕೆ ಪುಟಾಣಿ ಮಗುವಿನ ಜೀವ ಬಲಿಯಾಗಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಯು ದೇಶಾದ್ಯಂತ ಇರುವ ಎಲ್ಲಾ ಶಾಲಾ ಬಸ್‌ಗಳ ಸುರಕ್ಷತೆಯ ಬಗ್ಗೆ ತಪಾಸಣೆ ನಡೆಸುವ ಅನಿವಾರ್ಯತೆಯನ್ನು ನೆನಪಿಸಿದೆ.