ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಬೊಂಬೆನಾಡ ಗಂಗೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ನಗರದ ಬಾಲಕರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಭಾಗವಹಿಸಿ ಸಂಭ್ರಮಿಸಿದರು. ಗಂಗೋತ್ಸವದ ಅಂಗವಾಗಿ ರಾಜೇಶ್ ಕೃಷ್ಣನ್ ಅವರ ಮ್ಯೂಸಿಕಲ್ ನೈಟ್ ವಿಶೇಷ ಆಕರ್ಷಣೆಯಾಗಿ ಜನಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ವತಃ ಹಾಜರಾಗಿ ಜನರೊಂದಿಗೆ ಸಂಭ್ರಮ ಹಂಚಿಕೊಂಡರು. ಶಾಸಕ ಸಿ.ಪಿ. ಯೋಗೆಶ್ವರ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡರು, ಜನಪ್ರತಿನಿಧಿಗಳು ಹಾಗೂ ಗಣ್ಯರು ಭಾಗವಹಿಸಿದರು. ಎಂಎಲ್ಸಿ ಎಸ್. ರವಿ, ನಟ ಹಾಗೂ ನಿರ್ದೇಶಕ ಜೋಗಿ ಪ್ರೇಮ್ ಸೇರಿದಂತೆ ಹಲವರು ವೇದಿಕೆಯನ್ನು ಅಲಂಕರಿಸಿದರು.
ಗಂಗೋತ್ಸವವು ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲ, ಅದು ಜನರನ್ನು ಒಗ್ಗೂಡಿಸುವ ಸಾಂಸ್ಕೃತಿಕ ಉತ್ಸವವೂ ಆಗಿದೆ. ಸಂಗೀತ, ನೃತ್ಯ, ಕಲಾ ಪ್ರದರ್ಶನಗಳೊಂದಿಗೆ ನಡೆದ ಈ ಕಾರ್ಯಕ್ರಮವು ಚನ್ನಪಟ್ಟಣದ ಜನತೆಗೆ ಹಬ್ಬದ ಸಂಭ್ರಮವನ್ನು ತಂದಿತು. ಜನಸಾಮಾನ್ಯರು, ಯುವಕರು, ಮಹಿಳೆಯರು ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡು ಗಂಗೆಯ ಆರಾಧನೆಗೆ ತಮ್ಮ ಭಕ್ತಿ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ಜೋಗಿ ಪ್ರೇಮ್, “ಡಿಕೆ ಸಾಹೇಬ್ರು ಇಂದು ಡಿಸಿಎಂ ಆಗಿ ಈ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಸಿಎಂ ಆಗಿ ಇದೇ ಕಾರ್ಯಕ್ರಮಕ್ಕೆ ಬರ್ತಾರೆ. ಎಲ್ಲರಿಗೂ ಒಳ್ಳೆಯದಾಗಲಿ” ಎಂದು ಶುಭಾಶಯ ಕೋರಿದರು. ಅವರ ಮಾತುಗಳು ಜನರಲ್ಲಿ ಉತ್ಸಾಹ ಮೂಡಿಸಿದವು ಎನ್ನಬಹದು.
ಗಂಗೋತ್ಸವದಂತಹ ಕಾರ್ಯಕ್ರಮಗಳು ಜನರ ಜೀವನದಲ್ಲಿ ಧಾರ್ಮಿಕತೆ, ಸಂಸ್ಕೃತಿ ಮತ್ತು ಒಗ್ಗಟ್ಟಿನ ಮಹತ್ವವನ್ನು ನೆನಪಿಸುತ್ತವೆ. ಚನ್ನಪಟ್ಟಣದ ಈ ಉತ್ಸವವು ಜನರ ಹೃದಯದಲ್ಲಿ ನೆನಪಾಗುವಂತಹ ಸಂಭ್ರಮವನ್ನು ಮೂಡಿಸಿದೆ. ಗಂಗೋತ್ಸವವು ಚನ್ನಪಟ್ಟಣದ ಜನರಿಗೆ ಆಧ್ಯಾತ್ಮಿಕ ಶಾಂತಿ, ಸಾಂಸ್ಕೃತಿಕ ವೈಭವ ಮತ್ತು ಸಾಮಾಜಿಕ ಒಗ್ಗಟ್ಟಿನ ಸಂದೇಶ ನೀಡಿದ ಮಹತ್ವದ ಕಾರ್ಯಕ್ರಮವಾಯಿತು.