Apr 23, 2026 Languages : ಕನ್ನಡ | English

ಹಳೆಯ ವಿಡಿಯೋ ಹಂಚಿಕೊಂಡು ಎಚ್ಚರಿಕೆ ನೀಡಿದ ಶ್ರೀದೇವಿ ಬೈರಪ್ಪ! "ಸುಳ್ಳು ಆರೋಪಗಳಿಗೆ ಹೆದರಬೇಡಿ" ಎಂದಿದ್ದೇಕೆ?

ಸ್ಯಾಂಡಲ್‌ವುಡ್‌ನ ಸ್ಟಾರ್ ಕಪಲ್ ಯುವ ರಾಜ್‌ಕುಮಾರ್ ಮತ್ತು ಶ್ರೀದೇವಿ ಬೈರಪ್ಪ ಅವರ ದಾಂಪತ್ಯದ ಕಿತ್ತಾಟ ಈಗ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿ ಈಗ ಕೋರ್ಟ್ ಮೆಟ್ಟಿಲೇರಿರೋದು ಎಲ್ಲರಿಗೂ ಗೊತ್ತಿರೋ ವಿಚಾರ. ಆದ್ರೆ, ಇತ್ತೀಚೆಗೆ ಶ್ರೀದೇವಿ ಅವರು ಹಂಚಿಕೊಂಡ ಒಂದು ಇನ್ಸ್ಟಾಗ್ರಾಮ್ ಪೋಸ್ಟ್ ಹೊಸ ಸಂಚಲನ ಸೃಷ್ಟಿಸಿದೆ.


ಯುವ ರಾಜ್‌ಕುಮಾರ್‌ಗೆ ಶ್ರೀದೇವಿ ನೇರ ಟಾಂಗ್ | Photo Credit: sridevibyrappa/
ಯುವ ರಾಜ್‌ಕುಮಾರ್‌ಗೆ ಶ್ರೀದೇವಿ ನೇರ ಟಾಂಗ್ | Photo Credit: sridevibyrappa/

ವಿಡಿಯೋ ಹಿಂದಿನ ಗುಟ್ಟು ಏನು?

ಶ್ರೀದೇವಿ ಅವರು ತಾವು ಮತ್ತು ಯುವ ರಾಜ್‌ಕುಮಾರ್ ಜೊತೆಗಿದ್ದ ಹಳೆಯ ವಿಡಿಯೋವೊಂದನ್ನ ಶೇರ್ ಮಾಡಿದ್ದಾರೆ. ಇದನ್ನು ನೋಡಿದ ಫ್ಯಾನ್ಸ್ ಇವರು ಮತ್ತೆ ಒಂದಾಗ್ತಿದ್ದಾರಾ? ಅಂತ ಅಂದುಕೊಳ್ಳುವಷ್ಟರಲ್ಲೇ ಅದರ ಕೆಳಗಿದ್ದ 'ಕ್ಯಾಪ್ಶನ್' ಎಲ್ಲರ ಕಣ್ಣು ಕೆಂಪಾಗುವಂತೆ ಮಾಡಿದೆ. ಶ್ರೀದೇವಿ ಈ ವಿಡಿಯೋ ಹಾಕಿದ್ದು ನೆನಪಿಗಾಗಿ ಅಲ್ಲ, ಬದಲಾಗಿ ಮಹಿಳೆಯರ ಹಕ್ಕುಗಳ ಬಗ್ಗೆ ದನಿ ಎತ್ತಲು.

ಶ್ರೀದೇವಿ ಬರೆದಿರೋ ಪ್ರಕಾರ, ಮಹಿಳೆಯರ ಹಕ್ಕುಗಳ ಬಗ್ಗೆ ನಾನು ಯಾವುದೇ ಕಾಲೇಜಿನಲ್ಲೋ ಅಥವಾ ಸಮಾಜದ ಪಾಠದಲ್ಲೋ ಕಲಿತಿದ್ದಲ್ಲ. ನನ್ನ ಜೀವನದ ಕಠಿಣ ಸಮಯಗಳು ನನಗೆ ಈ ಹಕ್ಕುಗಳನ್ನ ಪರಿಚಯಿಸಿವೆ. ನಾವು ಹುಡುಗಿಯನ್ನ ಬೇರೆ ಮನೆಗೆ ಹೋಗೋಕೆ ರೆಡಿ ಮಾಡ್ತೀವಿ ಹೊರತು, ಅವರಿಗೆ ಕಾನೂನಿನ ಅರಿವು ಮೂಡಿಸಲ್ಲ ಅನ್ನೋದು ಅವರ ಅಳಲು.

ಹೋರಾಡುತ್ತಿರುವ ಮಹಿಳೆಯರಿಗೆ ಎರಡು ಕಿವಿಮಾತು

ಶ್ರೀದೇವಿ ಅವರು ದೌರ್ಜನ್ಯ ಅನುಭವಿಸುತ್ತಿರುವ ಮಹಿಳೆಯರಿಗೆ ಎರಡು ಮುಖ್ಯ ಸಂದೇಶಗಳನ್ನ ನೀಡಿದ್ದಾರೆ

ಸುಳ್ಳು ಆರೋಪಕ್ಕೆ ಹೆದರಬೇಡಿ - ದಾಂಪತ್ಯ ಚೆನ್ನಾಗಿದ್ದಾಗ ನಿಮ್ಮ ಬಗ್ಗೆ ಸುಳ್ಳು ಆರೋಪಗಳನ್ನ ಮಾಡಿದ್ರೆ ತಾಳ್ಮೆಯಿಂದಿರಿ. ನೀವು ತಪ್ಪು ಮಾಡಿಲ್ಲ ಅಂದಮೇಲೆ ಅದನ್ನು ಸಾಬೀತುಪಡಿಸೋ ಜವಾಬ್ದಾರಿ ಅವರದ್ದು, ನಿಮ್ಮದಲ್ಲ.

ಬೆದರಿಕೆಗಳಿಗೆ ಬಗ್ಗಬೇಡಿ - ಸೋಷಿಯಲ್ ಮೀಡಿಯಾದಿಂದ ಫೋಟೋ ಅಥವಾ ವಿಡಿಯೋ ಡಿಲೀಟ್ ಮಾಡುವಂತೆ ಯಾರಾದ್ರೂ ಬೆದರಿಕೆ ಹಾಕಿದ್ರೆ ಹೆದರಬೇಡಿ. ಸುಳ್ಳು ಕಥೆಗಳಿಗಿಂತ ಕೋರ್ಟ್‌ನಲ್ಲಿ 'ಸಾಕ್ಷಿ'ಗೇ ಬೆಲೆ ಹೆಚ್ಚು ಅನ್ನೋದನ್ನ ನೆನಪಿಡಿ ಅಂದಿದ್ದಾರೆ.

ಅಕ್ರಮ ಸಂಬಂಧದ ಬಗ್ಗೆ ನೇರ ವಾಗ್ದಾಳಿ?

ಶ್ರೀದೇವಿ ಅವರ ಈ ಪೋಸ್ಟ್‌ನಲ್ಲಿ ಒಂದು ಗಂಭೀರವಾದ ಸಾಲಿದೆ. "ಮದುವೆಯಾಗಿದ್ದರೂ ಅಕ್ರಮ ಸಂಬಂಧದಲ್ಲಿರುವುದು ತಪ್ಪು. ಮದುವೆಯಾದ ಮೇಲೂ ಫ್ರೀಯಾಗಿ ಓಡಾಡೋದು ಸರಿ ಅಲ್ಲ" ಅಂತ ಹೇಳುವ ಮೂಲಕ ಯುವ ರಾಜ್‌ಕುಮಾರ್ ಅವರಿಗೆ ಟಾಂಗ್ ನೀಡಿದ್ದಾರಾ ಅನ್ನೋ ಅನುಮಾನ ಮೂಡಿದೆ. "ಎಲ್ಲಾ ಗಾಯಗಳು ಕಣ್ಣಿಗೆ ಕಾಣಲ್ಲ, ಆದ್ರೆ ಪ್ರತಿ ಮೌನಕ್ಕೂ ಒಂದು ಬೆಲೆ ಇರುತ್ತೆ" ಅನ್ನೋ ಮಾತು ಸದ್ಯ ಸಖತ್ ವೈರಲ್ ಆಗ್ತಿದೆ.

ಮಹಿಳೆಯರ ಫುಲ್ ಸಪೋರ್ಟ್

ಈ ಪೋಸ್ಟ್ ಕೆಳಗೆ ನೂರಾರು ಮಹಿಳೆಯರು ಶ್ರೀದೇವಿ ಅವರಿಗೆ ಸಪೋರ್ಟ್ ಮಾಡ್ತಿದ್ದಾರೆ. "ಗೌರವದ ಹೆಸರಲ್ಲಿ ಹೆಣ್ಣುಮಕ್ಕಳು ಬಾಯಿ ಮುಚ್ಚಿ ಸುಮ್ಮನಿರೋದು ಸಾಕು, ನಿಮ್ಮ ಧೈರ್ಯ ನಮಗೆ ಇಷ್ಟವಾಯ್ತು" ಅಂತ ಹಲವರು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು "ಬರೀ ಹೆಣ್ಣುಮಕ್ಕಳನ್ನ ದೂರೋದು ಬಿಟ್ಟು ಗಂಡುಮಕ್ಕಳಿಗೆ ಮೊದಲು ಬುದ್ಧಿ ಕಲಿಸಿ" ಅಂತ ಆಕ್ರೋಶ ಹೊರಹಾಕ್ತಿದ್ದಾರೆ.

ಯುವ ಮತ್ತು ಶ್ರೀದೇವಿ ಅವರ ಈ ವೈಯಕ್ತಿಕ ವಿಚಾರ ದಿನಕ್ಕೊಂದು ತಿರುವು ಪಡಿತಾ ಇದೆ. ಶ್ರೀದೇವಿ ಅವರ ಈ ದಿಟ್ಟ ಪೋಸ್ಟ್ ಮುಂದಿನ ದಿನಗಳಲ್ಲಿ ಯಾವ ರೀತಿ ಪರಿಣಾಮ ಬೀರುತ್ತೆ ಅನ್ನೋದನ್ನ ಕಾದು ನೋಡಬೇಕು.

Latest News