Mar 23, 2026 Languages : ಕನ್ನಡ | English

ಯುಗಾದಿ ಸಂಭ್ರಮಕ್ಕೆ 'ಸನ್ ಉದಯ' ಹೊಸ ರೂಪ - ಇದೆ ತಿಂಗಳು ಶುರುವಾಗಲಿದೆ 'ಮೂಗುತಿ ಮಲ್ಲಿ'ಯ ಜಾದೂ!!

ಕಳೆದ ಮೂರು ದಶಕಗಳಿಂದ ಕನ್ನಡಿಗರ ಮನೆಮಾತಾಗಿದ್ದ ಉದಯ ಟೀವಿ, ಈ ಯುಗಾದಿಯ ಶುಭ ದಿನದಂದು ಹೊಸತನದೊಂದಿಗೆ ಸಜ್ಜಾಗಿದೆ. ಈಗ ಈ ವಾಹಿನಿಯು 'ಸನ್ ಉದಯ' ಎಂಬ ಹೊಸ ಹೆಸರಿನೊಂದಿಗೆ ಪ್ರಸಾರವಾಗಲಿದೆ. ಕೇವಲ ಹೆಸರಷ್ಟೇ ಅಲ್ಲದೆ, ಕಾರ್ಯಕ್ರಮಗಳ ಗುಣಮಟ್ಟ ಮತ್ತು ವಿಷಯಗಳಲ್ಲೂ ದೊಡ್ಡ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಹೊಸ ತಲೆಮಾರಿನ ಕಲಾವಿದರು, ನಿರ್ದೇಶಕರು ಮತ್ತು ವಿಭಿನ್ನ ಕಥೆಗಳೊಂದಿಗೆ ವೀಕ್ಷಕರನ್ನು ರಂಜಿಸಲು ವಾಹಿನಿಯ ಮುಖ್ಯಸ್ಥರು ಸಜ್ಜಾಗಿದ್ದಾರೆ.

ಹೊಸ ಹೆಸರು, ಹೊಸ ಕಥೆ: 'ಮೂಗುತಿ ಮಲ್ಲಿ' ನಿಮ್ಮ ಮನೆಗೆ; | Photo Credit: udaya tv
ಹೊಸ ಹೆಸರು, ಹೊಸ ಕಥೆ: 'ಮೂಗುತಿ ಮಲ್ಲಿ' ನಿಮ್ಮ ಮನೆಗೆ; | Photo Credit: udaya tv

ಈ ಹೊಸ ಬದಲಾವಣೆಯ ಮೊದಲ ಹೆಜ್ಜೆಯಾಗಿ ಮಾರ್ಚ್ 23, ಸೋಮವಾರದಿಂದ ರಾತ್ರಿ 8 ಗಂಟೆಗೆ 'ಮೂಗುತಿ ಮಲ್ಲಿ' ಎಂಬ ಹೊಸ ಧಾರಾವಾಹಿ ಆರಂಭವಾಗಲಿದೆ. ಇದು ಒಬ್ಬ ಚೂಟಿ, ಘಾಟಿ ಮತ್ತು ಸ್ವಾಭಿಮಾನಿ ಹುಡುಗಿ ಮಲ್ಲಿಯ ಕಥೆ. ತಂದೆಯಿಂದ ಕಲಿತ ಅಡುಗೆ ಕಲೆಯನ್ನೇ ಬದುಕಿನ ಹಾದಿಯನ್ನಾಗಿಸಿಕೊಂಡಿರುವ ಮಲ್ಲಿ, ಮನೆ ಮನೆಗೆ ಹೋಗಿ ಅಡುಗೆ ಮಾಡುವ ಕೆಲಸ ಮಾಡುತ್ತಾಳೆ. ಅಣ್ಣನ ಬೇಜವಾಬ್ದಾರಿತನದಿಂದ ಇಡೀ ಕುಟುಂಬದ ಹೊಣೆ ಈಕೆಯ ಮೇಲಿದೆ. ಶ್ರೀಮಂತರನ್ನು ಕಂಡರೆ ಕಿಲೋಮೀಟರ್ ದೂರ ಓಡುವ ಮಲ್ಲಿಗೆ, ಮಸಾಲೆ ಕಂಪನಿ ನಡೆಸುವ ಶ್ರೀಮಂತ ಕುಟುಂಬದ ಹುಡುಗ ವಿರಾಜ್‌ನ ಭೇಟಿಯಾದಾಗ ಏನಾಗುತ್ತದೆ ಎಂಬುದೇ ಈ ಧಾರಾವಾಹಿಯ ಸ್ವಾರಸ್ಯ.

ಈ ಧಾರಾವಾಹಿಯಲ್ಲಿ 'ಅಂತರಪಟ' ಖ್ಯಾತಿಯ ಚಂದನ್ ಗೌಡ ನಾಯಕನಾಗಿ (ವಿರಾಜ್) ಕಾಣಿಸಿಕೊಂಡರೆ, 'ಕೋಟಿ' ಸಿನಿಮಾದಲ್ಲಿ ನಟಿಸಿದ್ದ ತನುಜಾ ವೆಂಕಟೇಶ್ ನಾಯಕಿಯಾಗಿ (ಮಲ್ಲಿ) ನಟಿಸುತ್ತಿದ್ದಾರೆ. ಇವರ ಜೊತೆಗೆ ಹಿರಿಯ ನಟಿ ಅಂಬಿಕಾ, ಕೀರ್ತಿ ಭಟ್, ವೀಣಾ ಪೊನ್ನಪ್ಪ ಸೇರಿದಂತೆ ದೊಡ್ಡ ತಾರಾಗಣವೇ ಇಲ್ಲಿದೆ. ನಟನಾಗಿ ಗುರುತಿಸಿಕೊಂಡಿದ್ದ ಆರವ್ ಕಾರ್ತಿಕ್ ಈ ಧಾರಾವಾಹಿಯ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಅಜಯ್ ರವಿ ಅವರು ಈ ಸೀರಿಯಲ್ ಅನ್ನು ನಿರ್ಮಾಣ ಮಾಡುತ್ತಿದ್ದು, ಪುನೀತ್ ಅವರ ಛಾಯಾಗ್ರಹಣ ಈ ಕಥೆಗೆ ದೃಶ್ಯ ವೈಭವ ನೀಡಲಿದೆ.

ಸನ್ ಉದಯ ವಾಹಿನಿಯು ಕನ್ನಡಿಗರಿಗೆ ಇನ್ನಷ್ಟು ಹತ್ತಿರವಾಗಲು ಈ ಪ್ರಯತ್ನ ನಡೆಸುತ್ತಿದೆ. "ಹೊಸ ಕಲಾವಿದರು ಮತ್ತು ಉತ್ತಮ ತಾಂತ್ರಿಕತೆಯೊಂದಿಗೆ ನಾವು ಬರುತ್ತಿದ್ದೇವೆ, ಕನ್ನಡಿಗರು ಖಂಡಿತಾ ನಮ್ಮನ್ನು ಪ್ರೋತ್ಸಾಹಿಸುತ್ತಾರೆ" ಎಂದು ಚಾನೆಲ್ ಮುಖ್ಯಸ್ಥರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಾರ್ಚ್ 23ರಿಂದ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 8 ಗಂಟೆಗೆ ಮಲ್ಲಿಯ ಈ ರೋಚಕ ಕಥೆ ನಿಮ್ಮ ಮನೆಯ ಅಂಗಳಕ್ಕೆ ಬರಲಿದೆ. ಹಸಿವು ಮತ್ತು ಅನ್ನದ ಬೆಲೆ ತಿಳಿದಿರುವ ಮಲ್ಲಿ ಹಾಗೂ ಪ್ರೀತಿಗಾಗಿ ಹಂಬಲಿಸುವ ವಿರಾಜ್‌ನ ಈ ಪಯಣ ವೀಕ್ಷಕರಿಗೆ ಹೊಸ ಅನುಭವ ನೀಡಲಿದೆ.