ಸ್ಯಾಂಡಲ್ವುಡ್ನಲ್ಲಿ ತಮ್ಮದೇಯಾದ ಛಾಪು ಮೂಡಿಸಿ ಹಿಟ್ ಸಿನಿಮಾ ನೀಡುತ್ತಿರುವ ನಟ ಮತ್ತು ನಿರ್ದೇಶಕ ಡಾರ್ಲಿಂಗ್ ಕೃಷ್ಣ ಅವರ ಮೇಲೆ ಒಂದು ಆರೋಪ ಕೇಳಿ ಬರುತ್ತಿದೆ. ಇವರ ಪ್ರತಿ ಹೆಜ್ಜೆಗೂ ಸಾಥ್ ನೀಡುತ್ತಾ ಬಂದಿರುವ ಪತ್ನಿ ಮತ್ತು ನಟಿ ಮಿಲನಾ ಕೃಷ್ಣ ಲವ್ ಮಾಕ್ಟೇಲ್ ಅಲ್ಲಿ ನಟಿಸಿದ್ದರು. ಈ ಜೋಡಿ ಕನ್ನಡ ಚಿತ್ರರಂಗಕ್ಕೆ ಒಂದು ರೀತಿಯಲ್ಲಿ ಸ್ಫೂರ್ತಿಯಾಗಿದ್ದಾರೆ. ಡಾರ್ಲಿಂಗ್ ಕೃಷ್ಣ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ 'ಲವ್ ಮಾಕ್ಟೇಲ್-3' ಸದ್ಯ ಬಾಕ್ಸಾಫೀಸ್ನಲ್ಲಿ ಧೂಳೆಬ್ಬಿಸುತ್ತಿದೆ. ಮಾರ್ಚ್ 19ರಂದು ತೆರೆಕಂಡ ಈ ಚಿತ್ರವು 'ಧುರಂಧರ್-2' ನಂತಹ ದೊಡ್ಡ ಸಿನಿಮಾಗಳ ಪೈಪೋಟಿಯ ನಡುವೆಯೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಆದರೆ, ಈ ಯಶಸ್ಸಿನ ನಡುವೆಯೇ ಚಿತ್ರತಂಡಕ್ಕೆ ದೊಡ್ಡದೊಂದು ಸಂಕಷ್ಟ ಎದುರಾಗಿದೆ. ಅದೇನೆಂದರೆ, ಈ ಸಿನಿಮಾದ ಕಥೆಯನ್ನು ಕದಿಯಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಕಥೆ ಕದ್ದ ಆರೋಪ ಮಾಡಿದ್ದು ಯಾರು?
ದಿಗಂತ್ ಅಭಿನಯದ 'ಮಾರಿಗೋಲ್ಡ್' ಚಿತ್ರದ ನಿರ್ದೇಶಕ ರಾಘವೇಂದ್ರ ನಾಯ್ಕ್ ಅವರು ಡಾರ್ಲಿಂಗ್ ಕೃಷ್ಣ ಅವರ ಮೇಲೆ ಈ ಆರೋಪ ಮಾಡಿದ್ದಾರೆ. ಸುಮಾರು 20 ವರ್ಷಗಳಿಂದ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ರಾಘವೇಂದ್ರ ಅವರು, ಫೇಸ್ಬುಕ್ನಲ್ಲಿ ಸುದೀರ್ಘ ಪೋಸ್ಟ್ ಹಾಕುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. "ಮೂರು ವರ್ಷಗಳ ಹಿಂದೆಯೇ ನಾನು ಈ ಕಥೆಯನ್ನು ಡಾರ್ಲಿಂಗ್ ಕೃಷ್ಣ ಅವರಿಗೆ ಹೇಳಿದ್ದೆ. ಆದರೆ ಅವರು ಈಗ ನನಗೆ ತಿಳಿಯದಂತೆ ಅದೇ ಕಥೆಯನ್ನು ಸ್ವಲ್ಪ ಬದಲಾಯಿಸಿ 'ಲವ್ ಮಾಕ್ಟೇಲ್-3' ಮಾಡಿದ್ದಾರೆ" ಎಂದು ಅವರು ದೂರಿದ್ದಾರೆ.
ವಿವಾದದ ಹಿನ್ನೆಲೆ ಏನು?
ರಾಘವೇಂದ್ರ ನಾಯ್ಕ್ ಅವರು ಸಿದ್ಧಪಡಿಸಿದ್ದ ಒಂದು ಕಥೆಯನ್ನು ನಿರ್ಮಾಪಕ ಗುರುದೇಶ್ ಪಾಂಡೆ ಅವರಿಗೆ ನೀಡಿದ್ದರು. ಆ ಕಥೆಯನ್ನು ಆಧರಿಸಿ ಡಾರ್ಲಿಂಗ್ ಕೃಷ್ಣ ಅವರೊಂದಿಗೆ ಸಿನಿಮಾ ಮಾಡಲು ಈ ಹಿಂದೆ ಮಾತುಕತೆಯಾಗಿತ್ತು. ಗುರುದೇಶ್ ಪಾಂಡೆ ಅವರ ಸೂಚನೆಯಂತೆ ರಾಘವೇಂದ್ರ ಅವರು ಕೃಷ್ಣ ಅವರಿಗೆ ಕಥೆ ವಿವರಿಸಿದ್ದರು. ಆದರೆ ಕಥೆ ಕೇಳಿದ ಬಳಿಕ ಕೃಷ್ಣ ಅವರು, "ಇದೇ ರೀತಿಯ ಕಥೆಯ ಸಿನಿಮಾವನ್ನು ನಾನು ಈಗ ಮಾಡುತ್ತಿದ್ದೇನೆ, ಸದ್ಯಕ್ಕೆ ಈ ಪ್ರಾಜೆಕ್ಟ್ ಬೇಡ" ಎಂದು ಹೇಳಿ ಕಳುಹಿಸಿದ್ದರು ಎನ್ನಲಾಗಿದೆ.
ನಂತರ ರಾಘವೇಂದ್ರ ನಾಯ್ಕ್ ಅವರು ಅದೇ ಕಥೆಯನ್ನು ರಮೇಶ್ ಅರವಿಂದ್ ಅಥವಾ ಶರಣ್ ಅವರೊಂದಿಗೆ ಮಾಡಲು ಸಿದ್ಧತೆ ನಡೆಸುತ್ತಿದ್ದರು. ಅಷ್ಟರಲ್ಲೇ 'ಲವ್ ಮಾಕ್ಟೇಲ್-3' ಬಿಡುಗಡೆಯಾಗಿದ್ದು, ಅದರಲ್ಲಿ ತಮ್ಮದೇ ಕಥೆ ಇರುವುದನ್ನು ಕಂಡು ಅವರು ಬೆಚ್ಚಿಬಿದ್ದಿದ್ದಾರೆ.
ಕಥೆಯಲ್ಲಿನ ಸಾಮ್ಯತೆಗಳೇನು?
ರಾಘವೇಂದ್ರ ನಾಯ್ಕ್ ವಾದದ ಪ್ರಕಾರ, ಅವರು ಕೃಷ್ಣ ಅವರಿಗೆ ಹೇಳಿದ್ದ ಕಥೆಯ ಮೂಲ ಆಶಯ 'ಮಗುವನ್ನು ದತ್ತು ಪಡೆಯುವುದು ಮತ್ತು ಅದರಿಂದ ಎದುರಾಗುವ ಕಾನೂನು ಹೋರಾಟ'. 'ಲವ್ ಮಾಕ್ಟೇಲ್-3' ಚಿತ್ರದ ದ್ವಿತೀಯಾರ್ಧದಲ್ಲಿಯೂ ನಾಯಕ ಆದಿ ಮಗುವನ್ನು ದತ್ತು ಪಡೆಯುತ್ತಾನೆ ಮತ್ತು ನಂತರ ಕಾನೂನು ಸಂಕಷ್ಟಗಳನ್ನು ಎದುರಿಸುತ್ತಾನೆ. ಈ ಕಥಾಹಂದರವು ಸಂಪೂರ್ಣವಾಗಿ ತಾವು ಬರೆದದ್ದೇ ಆಗಿದೆ ಎಂದು ರಾಘವೇಂದ್ರ ವಾದಿಸುತ್ತಿದ್ದಾರೆ.
ಆಧಾರಗಳಿವೆಯೇ?
ಈ ಬಗ್ಗೆ ಮಾತನಾಡಿರುವ ರಾಘವೇಂದ್ರ, "ನನ್ನ ಬಳಿ ಈ ಕಥೆ ನನ್ನದೇ ಎನ್ನುವುದಕ್ಕೆ ಸಾಕಷ್ಟು ಸಾಕ್ಷಿಗಳಿವೆ. ಸಂಭಾಷಣೆಗಾರ ರಘು ನಿಡುವಳ್ಳಿ ಅವರಿಗೆ ಈ ಕಥೆ ಗೊತ್ತು, ರಮೇಶ್ ಅರವಿಂದ್ ಅವರಿಗೂ ವಿವರಿಸಿದ್ದೇನೆ. ನಾವು ಕೃಷ್ಣ ಅವರನ್ನು ಭೇಟಿಯಾದ ಬಗ್ಗೆ ಸಿಸಿಟಿವಿ ದೃಶ್ಯಗಳು ಸಿಗಬಹುದು. ಸಿನಿಮಾ ಗೆದ್ದಿರುವುದು ಸಂತೋಷ, ಆದರೆ ಒಬ್ಬ ಲೇಖಕನ ಕಥೆಯನ್ನು ಹೀಗೆ ಕದಿಯುವುದು ಎಷ್ಟು ಸರಿ?" ಎಂದು ಪ್ರಶ್ನಿಸಿದ್ದಾರೆ.
ಸದ್ಯ ಈ ವಿವಾದವು ಗಾಂಧಿನಗರದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಒಬ್ಬ ಯಶಸ್ವಿ ನಿರ್ದೇಶಕನ ಮೇಲೆ ಇಂತಹ ಆರೋಪ ಬಂದಿರುವುದು ಅಭಿಮಾನಿಗಳಿಗೂ ಶಾಕ್ ನೀಡಿದೆ. ಗುರುದೇಶ್ ಪಾಂಡೆ ಅವರು ಈ ವಿಷಯದಲ್ಲಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ರಾಘವೇಂದ್ರ ತಿಳಿಸಿದ್ದಾರೆ.