ದೆಹಲಿಯ ರಸ್ತೆ ಬದಿಯಲ್ಲಿ ವಡಾ ಪಾವ್ ಮಾರುತ್ತಾ ರಾತ್ರೋರಾತ್ರಿ ಫೇಮಸ್ ಆದವರು ಚಂದ್ರಿಕಾ ದೀಕ್ಷಿತ್. ಸೋಶಿಯಲ್ ಮೀಡಿಯಾದಲ್ಲಿ 'ವಡಾ ಪಾವ್ ಗರ್ಲ್' ಎಂದೇ ಚಿರಪರಿಚಿತರಾದ ಇವರು, ನಂತರ ಹಿಂದಿ 'ಬಿಗ್ ಬಾಸ್' ಮನೆಗೂ ಎಂಟ್ರಿ ಕೊಟ್ಟಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಚಂದ್ರಿಕಾ ತಮ್ಮ ವೈಯಕ್ತಿಕ ಜೀವನದ ಕಹಿ ಸತ್ಯಗಳನ್ನು ಬಿಚ್ಚಿಡುವ ಮೂಲಕ ದಿನನಿತ್ಯ ಸುದ್ದಿಯಲ್ಲಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಪತಿ ಯುಗಮ್ ಜೊತೆಗಿನ ಜಗಳ ಬೀದಿಗೆ ಬಂದಿತ್ತು, ಈಗ ಚಂದ್ರಿಕಾ ಮತ್ತೊಂದು ಶಾಕಿಂಗ್ ವಿಷಯವನ್ನು ಹೊರಹಾಕಿದ್ದಾರೆ.
ಇತ್ತೀಚೆಗೆ ಸಿದ್ಧಾರ್ಥ್ ಕಣ್ಣನ್ ಅವರ ಪಾಡ್ಕಾಸ್ಟ್ನಲ್ಲಿ ಮಾತನಾಡಿದ ಚಂದ್ರಿಕಾ, ಗ್ಲಾಮರ್ ಪ್ರಪಂಚದ ಕರಾಳ ಮುಖವನ್ನು ಬಯಲು ಮಾಡಿದ್ದಾರೆ. ದೊಡ್ಡ ಉದ್ಯಮಿಯೊಬ್ಬರು ತನಗೆ ನೀಡಿದ್ದ ಅಸಭ್ಯ ಪ್ರಸ್ತಾಪದ ಬಗ್ಗೆ ಅವರು ಮನಬಿಚ್ಚಿ ಮಾತನಾಡಿದ್ದಾರೆ.
ಸಂದರ್ಶನದಲ್ಲಿ ಚಂದ್ರಿಕಾ ಹೇಳಿರುವ ಪ್ರಕಾರ, ಅವರಿಗೆ ಇ-ಮೇಲ್ ಮೂಲಕ ಒಂದು ಆಫರ್ ಬಂದಿತ್ತಂತೆ. "ನನಗೆ ದೊಡ್ಡ ಉದ್ಯಮಿಯೊಬ್ಬರಿಂದ ಮೇಲ್ ಬಂದಿತ್ತು. ಅದರಲ್ಲಿ ಅವರು ನನ್ನ ಜೊತೆ ಒಂದು ರಾತ್ರಿ ರೆಸಾರ್ಟ್ನಲ್ಲಿ ಕಳೆಯಲು ಬರೋಬ್ಬರಿ 50 ಲಕ್ಷ ರೂಪಾಯಿ ಆಫರ್ ಮಾಡಿದ್ದರು. ಅಷ್ಟೇ ಅಲ್ಲದೆ, 'ಜಾಗ ನನ್ನದು, ಷರತ್ತುಗಳೆಲ್ಲಾ ನಿಮ್ಮದು' ಎಂಬ ವಿಚಿತ್ರ ಪ್ರಸ್ತಾಪ ಇಟ್ಟಿದ್ದರು. ಇದರ ಸ್ಕ್ರೀನ್ಶಾಟ್ ಕೂಡ ನನ್ನ ಹತ್ತಿರ ಇದೆ," ಎಂದು ಚಂದ್ರಿಕಾ ಬಾಂಬ್ ಸಿಡಿಸಿದ್ದಾರೆ.
ಕೇವಲ ಉದ್ಯಮಿಗಳಷ್ಟೇ ಅಲ್ಲ, ಸಿನಿಮಾ ರಂಗದ ಕೆಲವು ನಿರ್ದೇಶಕರು ಮತ್ತು ನಿರ್ಮಾಪಕರು ಕೂಡ ತಮಗೆ ಇಂತಹದ್ದೇ ಆಫರ್ ನೀಡಿದ್ದರು ಎಂದು ಅವರು ಆರೋಪಿಸಿದ್ದಾರೆ. "ಇಂಡಸ್ಟ್ರಿಯಲ್ಲಿ ಬೆಳೆಯಬೇಕಾದರೆ ರಾಜಿ ಮಾಡಿಕೊಳ್ಳಲೇಬೇಕು ಎಂದು ಹಲವರು ನನಗೆ ಹೇಳಿದ್ದರು. ಈ ರಂಗ ಅದೆಷ್ಟು ಭ್ರಷ್ಟವಾಗಿದೆ ಎನ್ನುವುದಕ್ಕೆ ಇದೇ ಸಾಕ್ಷಿ," ಎಂದು ಅವರು ಕಿಡಿಕಾರಿದ್ದಾರೆ.
ಚಂದ್ರಿಕಾ ಬದುಕು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡ ಅವರು, "ನನ್ನ ಮಗ ಹುಟ್ಟಿ ಕೇವಲ 15 ದಿನ ಆಗಿದ್ದಾಗ, ಅವನನ್ನು ಶಿಶುವಿಹಾರದಲ್ಲಿ ಬಿಟ್ಟು ಹಲ್ದಿರಾಮ್ಸ್ನಲ್ಲಿ ದಿನಕ್ಕೆ 12-13 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದೆ. ಆ ಸಮಯದಲ್ಲಿ ನನ್ನ ಅತ್ತೆ 'ನಿನ್ನ ಸ್ವಂತ ಕಾಲ ಮೇಲೆ ನಿಂತು ತೋರಿಸು, ಆಮೇಲೆ ನಿನ್ನನ್ನು ಒಪ್ಪಿಕೊಳ್ಳುತ್ತೇನೆ' ಅಂದಿದ್ದರು. ಅಂದು ಕಷ್ಟಪಟ್ಟಾಗ ಯಾರೂ ನನ್ನ ಜೊತೆ ಇರಲಿಲ್ಲ, ಆದರೆ ಇಂದು ನನ್ನ ಕೆಲಸ ಮತ್ತು ಚಾರಿತ್ರ್ಯವನ್ನು ಎಲ್ಲರೂ ಪ್ರಶ್ನೆ ಮಾಡುತ್ತಿದ್ದಾರೆ," ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪತಿ ಯುಗಮ್ ತಮಗೆ ವಂಚನೆ ಮಾಡಿದ್ದಾರೆ ಎಂದು ಈ ಹಿಂದೆ ಚಂದ್ರಿಕಾ ಆರೋಪ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಯುಗಮ್ ಕೂಡ ಚಂದ್ರಿಕಾ ಬಗ್ಗೆ ಕೆಲವು ವಿಷಯಗಳನ್ನು ಹೇಳಿದ್ದರು. ಇಬ್ಬರ ನಡುವೆ ಯಾರು ಸತ್ಯ ಹೇಳುತ್ತಿದ್ದಾರೆ ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ.
ಚಂದ್ರಿಕಾ ಅವರ ಈ ಸ್ಫೋಟಕ ಹೇಳಿಕೆ ಈಗ ಇಂಟರ್ನೆಟ್ನಲ್ಲಿ ಸಂಚಲನ ಮೂಡಿಸಿದೆ. ಕೆಲವರು ಚಂದ್ರಿಕಾ ಅವರ ಧೈರ್ಯವನ್ನು ಮೆಚ್ಚಿದ್ದಾರೆ. "ಹೀಗೆ ನೇರವಾಗಿ ವಿಷಯಗಳನ್ನು ಹೇಳಲು ದೊಡ್ಡ ಧೈರ್ಯ ಬೇಕು" ಎಂದು ಕಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು "ಇದೆಲ್ಲಾ ಬಿಗ್ ಬಾಸ್ ನಂತರ ಸಿಗುತ್ತಿರುವ ಪ್ರಚಾರಕ್ಕಾಗಿ ಮಾಡುತ್ತಿರುವ ಗಿಮಿಕ್ ಅಷ್ಟೇ" ಎಂದು ಟೀಕಿಸುತ್ತಿದ್ದಾರೆ.
ವಡಾ ಪಾವ್ ಮಾರಾಟದಿಂದ ಶುರುವಾದ ಚಂದ್ರಿಕಾ ಪಯಣ ಈಗ ಹತ್ತಾರು ವಿವಾದಗಳ ಕೇಂದ್ರಬಿಂದುವಾಗಿದೆ. ತನ್ನ ಮಗನ ಭವಿಷ್ಯಕ್ಕಾಗಿ ನಾನು ಏನು ಬೇಕಾದರೂ ಮಾಡಲು ಸಿದ್ಧ ಎಂದು ಹೇಳುವ ಚಂದ್ರಿಕಾ, ಮುಂದಿನ ದಿನಗಳಲ್ಲಿ ಇನ್ನೇನು ಸತ್ಯಗಳನ್ನು ಬಿಚ್ಚಿಡುತ್ತಾರೋ ಕಾದು ನೋಡಬೇಕಿದೆ.
(ಗಮನಿಸಿ: ಈ ಲೇಖನವು ಚಂದ್ರಿಕಾ ದೀಕ್ಷಿತ್ ಅವರು ಪಾಡ್ಕಾಸ್ಟ್ನಲ್ಲಿ ನೀಡಿರುವ ಹೇಳಿಕೆಗಳ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ.)